Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಳೆ ಜಿನುಗು

ಮಳೆ ಜಿನುಗೆ,
ತೊಟ್ಟಿಕ್ಕಿ ತೊಟ್ಟಿಕ್ಕಿ
ತಟ್ಟಿ ತಟ್ಟಿ ನನ್ನ ನೆನಪ
ಮೇಲೆಬ್ಬಿಸಿದೆಯಾ ?

ಕಲ್ಲು ಕಟ್ಟಿ
ಮನದ ಪಾಳು ಬಾವಿಯಲಿ
ಮುಳುಗಿಸಿದ
ಮುಳ್ಳು ಹೂಗಿಡಳ
ಅರಳಿಸಿದೆಯಾ ?

ಬೇಡವೆಂದು ಬಿಸುಟ
ಬಳ್ಳಿಯ ಬೇರಿಗೆ
ನೀರಾಗಿ
ಬೇಗುದಿಯ ಕೊನರು
ನೀ ಬರಿಸಿದೆಯಾ ?

ಜಿನುಗದಿರು ಮಳೆಯೆ,
ಜೇನು ಹುಟ್ಟು
ಘಾತಗೊಂಡಂತೆ
ಕೈ-ನಾಲಿಗೆಯೊಡ್ಡಿ
ರುಚಿ ನೋಡುವ ತವಕವಿಲ್ಲದ
ಈ ಭೂಮಿಗೆ !

- ಶ್ರೀಗೋ.

01 Nov 2014, 08:10 am

ಕಣ್ಣುಮುಚ್ಚಿ....

ಅವಳ ಓರೆ ನೋಟದ ಕತ್ತಿಗೆ
ಕುತ್ತಿಗೆ ಕೊಟ್ಟವನು ನಾನೇ...!
ಅವಳ ತುಸು ನಸು ನಗೆಗೆ
ಹೃದಯ ಕೊಟ್ಟವನು ನಾನೇ...!
ಅವಳ ಮುದ್ದು ಪೆದ್ದು ಮಾತಿಗೆ
ಜೀವನವ ಮಾರಿಕೊಂಡವನು ನಾನೇ...!
ಅವಳು ಕನಸಿನಲ್ಲಿ ಬರುವೆನೆಂದುದನ್ನು ನಂಬಿ
ಕಣ್ಣುಗಳ ಮುಚ್ಚಿ ಮಲಗಿರುವವನು ನಾನೇ...!

- ಚೇತನ್ ಬಿ ಸಿ

31 Oct 2014, 03:33 pm

ಸವಿನೆನಪು

ನಿನ್ನದೊಂದು ನೋಟ ಸಾಕೆನಗೆ....
ನಿನ್ನದೊಂದು ನಗು ಸಾಕೆನಗೆ....
ನಿನ್ನದೊಂದು ಮಾತು ಸಾಕೆನಗೆ....
ನಿನ್ನದೊಂದು ಸ್ಪಶ೯ ಸಾಕೆನಗೆ....
ನಿನ್ನದೊಂದು ಮುತ್ತು ಸಾಕೆನಗೆ...
ಉಸಿರಾಡಲು ದೇಹ....
ಮಿಡಿಯಲು ಹೃದಯ....
ನೀನಿಲ್ಲದೆ ಈ ಜನುಮವ ಕಳೆಯಲು
ನಿನ್ನದೊಂದು ಸವಿನೆನಪು ಸಾಕೆನಗೆ.....

- ಚೇತನ್ ಬಿ ಸಿ

31 Oct 2014, 03:40 am

ನೀವೆಂತಾ ಅದೃಷ್ಟವಂತರು

ನನ್ನ ಕವನದ ಹಾವಳಿ ನಿಮ್ಮ ಕಿವಿಗಳಿಗಿಲ್ಲ
ನಾ ಬರೆದ ಕವನಗಳ ಯಾರೂ ಹಾಡುವುದಿಲ್ಲ
ಕರ್ಣ ಕಠೊರವಾಗಿ ಉಚ್ಚರಿಸುವುದಿಲ್ಲ
ಗೊಣಗುವಂತೆ ಯಾರೂ ಗುನುಗುಟ್ಟುವುದಿಲ್ಲ
ಏಕೆಂದರೆ ಮನಕ್ಕೆ ನಾಟುವಂತೆ ನಾ ಬರೆಯುವುದಿಲ್ಲ

ಒಮ್ಮೆ ಓದಿದರೆ ಮತ್ತೊಮ್ಮೆ ಕಣ್ಣು ಹಾಯಿಸುವ
ತವಕ ತರುವುದಿಲ್ಲ
ಮಗದೊಮ್ಮೆ ಓದುವ ಸಂಕಷ್ಟ ನಿಮಗಿಲ್ಲ
ಮರೆತು ಹೋಯಿತೆಂಬ ನೋವ ನಾ ಕೊಡುವುದಿಲ್ಲ
ಏಕೆಂದರೆ ನೆನಪಲ್ಲುಳಿವ ಕವನ ನಾ ಬರೆಯುವುದೇ ಇಲ್ಲ

ಬದುಕಿನ ನೂರು ನೋವ ಅರುಹಿ ತಲ್ಲಣಗೊಳಿಸುವುದಿಲ್ಲ
ಪ್ರೇಮ ಪುರಾಣ ಕೊರೆದು ನಿಮ್ಮ ತಲೆ ತಿನ್ನುವುದಿಲ್ಲ
ಸುಖದ ಸುಪ್ಪತ್ತಿಗೆಯ ಸವಿಗನಸ ಬಿತ್ತುವುದಿಲ್ಲ
ಕಾಮ ಕ್ರೋಧದ ಗಂದ ಗಾಳಿಯ ಕವನಗಳಿಲ್ಲ
ಏಕೆಂದರೆ ನನಗಾವ ಭಾವನೆಗಳೂ ಇಲ್ಲ.

- ಶ್ರೀಗೋ.

27 Oct 2014, 01:06 pm

ದೀಪಾವಳಿ

ಕಳೆದ ವರ್ಷ
ಪಟಾಕಿ ಹೊಡೆದು
ಕಣ್ಣು ಕಳಕೊಂಡಿದ್ದ
ಬಾಲಕನ ಮನೆಯಲ್ಲಿ
ಈ ವರ್ಷ...
ದೀಪ ಉರಿಯುತ್ತಿತ್ತು...
ಬೆಳಕಿರಲಿಲ್ಲ!!

- ಶ್ರೀಗೋ.

24 Oct 2014, 05:31 am

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ
ಮನಸನಿಟ್ಟು ಕನಸ ಕಟ್ಟಿದೆ
ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ
ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ
ಮಮತೆಯ ನಲ್ನುಡಿಯೇ ನಿನ್ನಾಭರಣ
ಮಾತೆಯ ಮಡಿಲಂತೆ ನಿನ್ನಂತಕರಣ
ಮಡಿಲಲ್ಲಿ ಮುದುಡುವ ಮಗುವಿನಾ ಪರಿ
ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ
ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ
ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ
ಗೆಳೆತನದ ಮಳೆಗಾಲ ಮುಗಿಯಲೇ ಬೇಕು
ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು
ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ
ಆತ್ಮೀಯ ಆರ್ಧತೆ ಸಲಹುತ್ತಿರೋಣ

- ಶ್ರೀಗೋ.

21 Oct 2014, 12:08 pm

ಮನದನ್ನೆ !

ಮನದಾಳ ಮನದನ್ನೆ
ಮನದಲ್ಲಿ ನಿನ್ನನ್ನೇ
ನೆನೆ ನೆನೆದು ಮನವಿಲ್ಲಿ !
ಮರವಾಗೆ ಫಲವೆಲ್ಲಿ ?
ಹಸಿರಾದ ಮನವೆಲ್ಲಿ ?
ಉಸಿರಾದ ನೀನೆಲ್ಲಿ ?
ಕೆಸರಾದ ಜಗದಲ್ಲಿ
ಕೊಸರಾಡೆ ಕಮಲಕ್ಕೆ
ನಿಡಿದಾದ ಉಸಿರಲ್ಲೆ
ಬಡವಾದೆ ನಾನಿಲ್ಲಿ !
ನೀನೆಲ್ಲಿ ? ನೀನೆಲ್ಲಿ ?

- ಶ್ರೀಗೋ.

21 Oct 2014, 12:07 pm

ಮೂಖ ಮನಸ್ಸಿನ ಮರ್ಮರ

ಮನದ ಮರಳುಗಾಡಲ್ಲಿ
ಅಳಿದುಳಿದ ಸ್ನೇಹದ ಪಳೆಯುಳಿಕೆ
ಜೀವದುಸುರಿಗೆ ಅದುವೇ ಅರಿವಳಿಕೆ
ನಳನಳಿಸಿದ ಹೂಮರವೇಕೋ
ಅಲುಗಾಡಿಸಿ ಬೀಳಿಸಿತು ಪಕ್ಷಿಯ ಗೂಡ
ಸ್ನೇಹಕೂ ಇಲ್ಲದಾಯ್ತೇ ಬೇಡಿಕೆ ನೋಡ.
ಅಜರಾಮರ ಗೆಳೆತನವೆಂದುಕೊಂಡದ್ದು
ಅರೆಘಳಿಗೆಗೇ ಕರಗುವ ದುರಂತ
ಹೃದಯದೊಳಗೆ ಪ್ರಚಂಡ ಚಂಡಮಾರುತ
ಅನ್ಯರ ನುಡಿಗೆ ದಿಕ್ಕೆಟ್ಟು
ಹೊರ ನಡೆದಳಾಕೆ ಪಾದ ಹೊರಗಿಟ್ಟು.

- ಶ್ರೀಗೋ.

21 Oct 2014, 12:04 pm

ಕಾನನ ಸುಮ

ಅರಳಿದೆನೊಂದು ಹೂವಾಗಿ
ಪಡೆದೆ ಚೆಲುವ ಬಲು ಹಿತವಾಗಿ
ಒಲಿದವರಿಲ್ಲ ಯಾರೂ..
ಏಕೆಂದರೆ ನಾನಿರುವೆ ಕಾನನದ ಸುಮವಾಗಿ !

ನೋಡುಗರ ಬೆರಗುಗಳಿಲ್ಲ
ಮಿಟುಕಿಸುವ ಕಣ್ಣುಗಳಿಲ್ಲ
ಹೃದಯ ಕದಿವ ಕಳ್ಳರಿಲ್ಲ
ಕದಿಯಲೆನಗೆ ಹೃದಯಗಳಿಲ್ಲ..
ಏಕೆಂದರೆ ನಾನಿರುವೆ ಕಾನನದ ಸುಮವಾಗಿ !

ಬಣ್ಣವಿಲ್ಲ ಬೆಳಕಿಗೆ
ಸೂರ್ಯನಿಲ್ಲ ಬಿಸಿಲಿಗೆ
ಹಾವು ಚೇಳುಗಳ ಸಂತೆಯೊಳಗೆ
ಕಾದಿರುವೆ ತುಮುಲದಲ್ಲಿ
ಬರಬಹುದೇನೋ ಬದುಕು ಬಯಲಿಗೆಂದು
ಏಕೆಂದರೆ ನಾನಿರುವೆ ಕಾನನದ ಸುಮವಾಗಿ !

- ಶ್ರೀಗೋ.

19 Oct 2014, 08:22 am

ಮಹಾನಗರದ ಮರಗಳು ನಾವು

ಮಹಾನಗರದ ಮರಗಳು ನಾವು
ಮೈ ಹರವಿ ನೆರಳಾಗುವೆವು
ಮುಗ್ಗರಿಸಿ ಬೀಳುವೆವು ಒಮ್ಮೊಮ್ಮೆ
ಗಾಳಿ ಮಳೆಗೆ
ಆವ ಜನ್ಮದ ಪಾಪ
ತಟ್ಟಿಹುದೋ ಎಮಗೆ ?

ಎಲ್ಲರೂ ವೈರಿಗಳು
ಈ ಮಹಾನಗರದೊಳಗೆ
ವಸಂತಕ್ಕೆ ಮೈದಳೆದರೆ...
ಕೊಂಚ ಮೈ ಕೊಡವಿ ಚಿಗಿತರೆ
ಕೆ.ಇ.ಬಿ.ಯವರ ಕಟಾವು
ಕಿಂಚಿತ್ ಒಣಗಿದರೆ ಕೊಂಬೆ
ಪಾಲಿಕೆಯವರ ಕೊಡಲಿ
ನಾ ಹೇಗೆ ನೆರಳ ಕೊಡಲಿ ?

ರಸ್ತೆ ಅಗಲೀಕರಣ,
ಫುಟ್ಪಾತ್ ನವೀಕರಣ
ಏನಿಲ್ಲದಿದ್ದರೂ ಯೋಧರ ವನ
ಎಲ್ಲದಕ್ಕೂ ಪ್ರತಿನಿತ್ಯ ನಮ್ಮ ಹನನ

ಕತ್ತರಿಸಿದರೂ ರೆಂಬೆ ಕೊಂಬೆಗಳ
ಮತ್ತೆ ಚಿಗಿತು ಜೀವನದಲಿ
ಹೋರಾಡೆಂಬ ಪಾಠ ಸಾರುವೆವು
ಬಿಸಿಲಿಗೆ ಬೇಯುವ ಜನಕೆ
ಬಿಡದೆ ನೆರಳಾಗುವೆವು.

- ಶ್ರೀಗೋ.

15 Oct 2014, 11:21 am