ಮುಕ್ತರಾಗೋಣ ಬನ್ನಿರಿ

ಮುಕ್ತರಾಗೋಣ ಬನ್ನಿರಿ
ಸದಾ ಶಾಂತರಾಗೋಣ ಬನ್ನಿರಿ
ಭಕ್ತಿ ಮಾರ್ಗದ ಮೂಲಕ || ಪ ||

ಸಮಾಧಾನಿಯಾಗಲು ಅತ್ತಿಂದಿತ್ತ
ಹರಿಯುವ ಮನವನು ನಿಲ್ಲಿಸಿ
ಸದಾ ನಮ್ಮೊಳಗೆ ಇರಿಸಬೇಕು || ೧ ||

ಕಾಮ ಕ್ರೋಧ, ಮದ, ಮತ್ಸರ,ಮೋಹ, ಲೋಭವನ್ನು
ಕಡಿಮೆ ಮಾಡುತ್ತ ಸಾಗಬೇಕು, ಇದನ್ನು ಸಾಧಿಸಲು
ನಿರಂತರ ಛಲ ಮತ್ತು ಆಸಕ್ತಿ ಬೇಕು || ೨ ||

ನಂತರ ದಯೆ, ಪ್ರೀತಿ, ಕರುಣೆ, ವಾತ್ಸಲ್ಯವೆಂಬ
ಪೈರು ಬೆಳೆಯಬೇಕು
ಬೆಳೆದರಷ್ಟೆ ಸಾಲದು ಪೋಷಿಸಬೇಕು || ೩ ||

ನಮ್ಮಲ್ಲಿರುವ ಕೀಳರಿಮೆ ಕಿತ್ತೊಗೆದು
ನಾವು ಪರಮಾತ್ಮನ ಎಳೆಯೆಂದು ತಿಳಿಯುವ
ಜ್ಞಾನ ಈ ಮನಕೆ ಬರಬೇಕು || ೪ ||

ಬಸವಾದಿ ಶರಣರ ವಚನಗಳು ಮತ್ತು
ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ‌ಯವರ
ನುಡಿಗಳು ಮುಕ್ತಿ ಮಾರ್ಗದ ಪಠ್ಯಕ್ರಮಗಳು || ೫ ||

ನಮ್ಮ ಜ್ಞಾನ ಗುರುವಿಗೆ ನಮಿಸಿ
ಶುದ್ಧಗೊಳಿಸಿದ ಮನದಲಿ
ಅವರ ನುಡಿಗಳನ್ನು ಇಳಿಸಬೇಕು || ೬ ||

ಬೆಳಕಿನಂತೆ ವಿಶಾಲವಾಗಬೇಕು ಈ ಮನ
ಬೆಳಕಿನಂತೆ ಸ್ವಚ್ಛವಾಗಬೇಕು, ಬೆಳಕಿನಂತೆ
ಏನನ್ನು ಅಂಟಿಸಿಕೊಳ್ಳದೆ , ನಾನು ನಾನಾಗಿರಬೇಕು || ೭||

ಸಾಧನೆಯಲ್ಲಿ ಆಕಸ್ಮಿಕ ಕ್ಲೇಶಗಳು ಮನಕೆ ತಾಗಿದರೆ
ಗಾಳಿಗೆ ಮರ ಅಲ್ಲಾಡಿ, ಮತ್ತೆ ಸ್ಥಿರವಾದಂತೆ
ಮತ್ತೆ ಮನ ಸುಧಾರಿಸಿ, ಸ್ಥಿರವಾಗಿಸಗಬೇಕು || ೮ ||

ಸಾಧಿಸಿದೆನೆಂದು ತಿಳಿದು ನಿಂತು ನೀರಾಗಬಾರದು
ಸಾಧನೆಯು ಹರಿಯುವ ನೀರಿನ ಹಾಗೆ
ಪರಮಾತ್ಮನಲ್ಲಿ ಲೀನವಾಗುವರೆಗೂ ನಿರಂತರವಾಗಿರಬೇಕು || ೯ ||

ಆಯುಷ್ಯವೆಂಬ ತೈಲ ತೀರುವ ಮುನ್ನ
ಭಕ್ತಿ ಪಥದಲ್ಲಿ ಸಾಗಿ
ಆತ್ಮಜ್ಞಾನ ಮಾಡಿಕೊಳ್ಳಬೇಕು || ೧೦ ||

ದಿನ, ತಿಂಗಳು, ವರ್ಷಗಳು ಕಳೆದಂತೆ
ಮನ ಶಾಂತಿ ಸಮಾಧಾನವಾದ ನಂತರವೂ
ಜಾಗೃತಿಯಿಂದ ಪೋಷಿಸಬೇಕು. || ೧೧ ||

- Hema Morab

06 Dec 2023, 06:55 pm
Download App from Playstore: