Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಹಾನಗರದ ಮರಗಳು ನಾವು

ಮಹಾನಗರದ ಮರಗಳು ನಾವು
ಮೈ ಹರವಿ ನೆರಳಾಗುವೆವು
ಮುಗ್ಗರಿಸಿ ಬೀಳುವೆವು ಒಮ್ಮೊಮ್ಮೆ
ಗಾಳಿ ಮಳೆಗೆ
ಆವ ಜನ್ಮದ ಪಾಪ
ತಟ್ಟಿಹುದೋ ಎಮಗೆ ?

ಎಲ್ಲರೂ ವೈರಿಗಳು
ಈ ಮಹಾನಗರದೊಳಗೆ
ವಸಂತಕ್ಕೆ ಮೈದಳೆದರೆ...
ಕೊಂಚ ಮೈ ಕೊಡವಿ ಚಿಗಿತರೆ
ಕೆ.ಇ.ಬಿ.ಯವರ ಕಟಾವು
ಕಿಂಚಿತ್ ಒಣಗಿದರೆ ಕೊಂಬೆ
ಪಾಲಿಕೆಯವರ ಕೊಡಲಿ
ನಾ ಹೇಗೆ ನೆರಳ ಕೊಡಲಿ ?

ರಸ್ತೆ ಅಗಲೀಕರಣ,
ಫುಟ್ಪಾತ್ ನವೀಕರಣ
ಏನಿಲ್ಲದಿದ್ದರೂ ಯೋಧರ ವನ
ಎಲ್ಲದಕ್ಕೂ ಪ್ರತಿನಿತ್ಯ ನಮ್ಮ ಹನನ

ಕತ್ತರಿಸಿದರೂ ರೆಂಬೆ ಕೊಂಬೆಗಳ
ಮತ್ತೆ ಚಿಗಿತು ಜೀವನದಲಿ
ಹೋರಾಡೆಂಬ ಪಾಠ ಸಾರುವೆವು
ಬಿಸಿಲಿಗೆ ಬೇಯುವ ಜನಕೆ
ಬಿಡದೆ ನೆರಳಾಗುವೆವು.

- ಶ್ರೀಗೋ.

15 Oct 2014, 11:21 am

ಓ ಕವಿಯೆ

ನಿನ್ನ ಲೇಖನಿಗೆ ತುಂಬಿ
ಬಣ್ಣ ಬಣ್ಣದ ಶಾಯಿ
ಬರೆಯದಿರು ಆತ್ಮವಿಲ್ಲದ
ನೂರಾರು ವ್ಯರ್ಥ ಕವಿತೆ!
ಇರಲಿ ಕಿಂಚಿತ್ತಾದರೂ
ರಕ್ತ ಚೀತ್ಕಾರದ ಚರಿತೆ,
ಅಲ್ಲದಿದ್ದರೂ ಹರಿಯಲಿ
ಬಡವನ ಬೆವರ ಹನಿಯ ಕಿರು ಒರತೆ !

- ಶ್ರೀಗೋ.

11 Oct 2014, 09:38 am

ಜೀವನ

ಹೊಸ ಬಟ್ಟೆ ಹಿಡಿದು
"ತಗೊಳ್ಳಿ ಸಾರ್, ತುಂಬಾ ಕಮ್ಮೀ ಬೆಲೆ"
ಎಂದು ಮಾರುತ್ತಾ ಬಂದವನ ಬಟ್ಟೆ
ಬಹಳ ಹಳೆಯದಾಗಿತ್ತು !

- ಶ್ರೀಗೋ.

11 Oct 2014, 07:06 am

ಕಮರು

ಹೇಗೋ ಹುಟ್ಟಿದ ಸ್ನೇಹವ ನೀನೇ
ಚಿವುಟಿದೆ ನಿನ್ನಯ ಉಗುರಿನಲಿ
ಸ್ನೇಹ ಒಂದೇ, ಮೋಹದ ಮುಂದೆ
ಉಳಿವುದು ಎಂದೇ ನಾ ಬೆಂದೆ.
ಯಾರದೋ ಶಾಪ, ಯಾರದೊ ಕೊಪ
ನೊಂದಿತು ಗೆಳತಿ ಈ ಮನಸು
ನಿನ್ನಯ ನಗುವೇ ನನ್ನಯ ಸ್ಫೂರ್ತಿಯು
ನೀ ನಗುತಿದ್ದರೆ ಅದು ಸೊಗಸು
ಏತಕೆ ವಾದ, ಬೇಡದ ಬೇಧ
ಮುಸುಕದೆ ಇರಲಿ ಕಾರ್ಮೋಡ
ಒಲುಮೆಯ ದುಡುಕು, ಬೇಡದ ಬಿರುಕು,
ಹಸನಾಗಿರಲಿ ನಿನ್ನ ಬದುಕು

- ಶ್ರೀಗೋ.

05 Oct 2014, 05:05 pm

ಅಣಕ

ಎತ್ತೆತ್ತ ನೋಡಲತ್ತತ್ತ ನಗುತಿದೆ
ಕ್ರೂರ ಮುಖ
ಕಂಗೆಡಿಸಿ ಮೇಲೆ ಬಿದ್ದಿದೆ ಹರಿ ಹಾಯ್ದು
ಚಾಚಿ ವ್ಯಾಘ್ರನಖ
ಬಾಚಿ ಬಿಗಿದಪ್ಪಿ ಉಸಿರುಗಟ್ಟಿಸಲೆತ್ನಿಸಿದೆ
ದೋಚಿ ಎಲ್ಲ ಸುಖ
ಸೋತು ಸೊರಗಿದರೂ ಮತ್ತೆ ಎಚ್ಚೆತ್ತು
ಹೋರಾಡುವ ವ್ಯರ್ಥ ಪ್ರಯತ್ನ
ಮಾಡಿ ಮಡಿವ ನನ್ನ ತುಸು ಯತ್ನ
ಗೆಲ್ಲಲಾರೆನೆಂದಿಗೂ ನಾ ಅರಿತೆ ವಿಧಿ ಬರಹ
ಮೆಟ್ಟಿ ನಿಲ್ಲಲಾರೆ ಮರೆತು ಕೂಡಾ
ಇದು ಜೀವನದ ನಿಜ ಅಣಕ.

- ಶ್ರೀಗೋ.

05 Oct 2014, 05:03 pm

ನಾ ಕಂಡ ಅವಳು

ತೀಡಿಟ್ಟ ಹುಬ್ಬು
ಮಿಂಚು ಮಿನುಗುವ ಕಣ್ಣು
ತುಟಿ ಬಿರಿದ ತೊಂಡೆ ಹಣ್ಣು
ಬಣ್ಣಿಸಲಿ ಹೇಗೆ ಕೆನ್ನೆಯನ್ನು?

ತುಳುಕಾಡೋ ಕೇಶ ರಾಶಿ
ಅದಕ್ಕೊಂದೇ ಮೇಘ ಸಾಟಿ
ನೀನಿರಲು ಹೃದಯ ಸ್ಫೂರ್ತಿ
ಜೀವ ಬಂದ ಸುಂದರ ಮೂರ್ತಿ

ಹಾಲ್ದೆನೆ ಹೊಯ್ದ ಮೈಯ ಬಣ್ಣ
ಹಾವಂತೆ ಬಳುಕೋ ಸೊಂಟ ಸಣ್ಣ
ಯೌವ್ವನಭರಿತ ಎದೆಯಂಗಗಳನ್ನ
ಪದಗಳಲ್ಲಿ ಬಚ್ಚಿಡಲೇ ನಾ?

ನಡು ಸಣ್ಣ, ಉದರ ಬಿಳ್ಮುಗಿಲು
ನಡುವೆ ಹೊಕ್ಕಳ ಟಿಸಿಲು
ಮತ್ತೆ ನಯ ವಿನಯ,
ಬಣ್ಣಿಸಲು ತುಂಬಾ ದಿಗಿಲು

ಪಾದರಸ ನಡಿಗೆ
ಶಾರದೆ ನುಡಿಗೆ
ಈ ಅಪೂರ್ವ ಸುಂದರಿಗೆ
ಕೆಂದಾವರೆ ನಗುಮೊಗದೊಡವೆ.

- ಶ್ರೀಗೋ.

05 Oct 2014, 05:02 pm

ಯಾರು ?

ಯಾರು ನಿನ್ನ ಒಂದು ಚಿತ್ರದಂತೆ ಗೀಚಿ ಹೋದವರು?
ಆ ರವಿವರ್ಮನಾ? ಇಲ್ಲ ಸಾಕ್ಷಾತ್ ಬ್ರಹ್ಮಾನಾ?
ಯಾರು ನಿನ್ನ ಕೆನ್ನೆ ಮೇಲೆ ಕುಳಿಯನಿಟ್ಟವರು?
ಆ ಮದನನೇನಾ? ಅಥವಾ ಕಳ್ಳ ಕೃಷ್ಣನಾ?

ಹುಬ್ಬು ತೀಡಿ ಕಾಮನ ಬಿಲ್ಲ ಹೊಸೆದವರ್ಯಾರೋ?
ಕಣ್ಣ ಜೋಡಿ ತಂದು ಇಟ್ಟು ಮೋಡಿ ಮಾಡಿದೋರ್ಯಾರೋ?
ಬೆಣ್ಣೆ ಮುದ್ದೆ ಜಾರಿ ಬಂದು ನಿನ್ನ ನಯ ಕೆನ್ನೆಯಾಯ್ತೋ.
ಮೇಘದ ತುಂಡು ತಂದು ಮುಂಗುರಳ ಮಾಡಲಾಯ್ತೋ?

ತುಟಿಯ ರಂಗು ಸೂರ್ಯ ತಾನೇ ಸಂಜೆ ತಂದು ಕೊಟ್ಟನೋ?
ಆ ಮುಗುಳು ನಗು ಚಂದ್ರ ಪೌರ್ಣಿಮೆಗೆ ಕಳೆದುಬಿಟ್ಟನೋ?
ಗುಲಾಬಿ ರಂಗು ನಿನ್ನ ಮೊಗದಿ ತನ್ನ ಅಂದ ಚೆಲ್ಲಿತೋ
ಕೋಗಿಲೆ ತನ್ನ ಧ್ವನಿಯ ನಿನಗೆಂದೇ ಧಾರೆಯೆರೆಯಿತೋ?.

- ಶ್ರೀಗೋ.

27 Sep 2014, 05:11 pm

ಈ ಹುಡುಗಿಯರೇ ಹೀಗೆ

ಬೆಟ್ಟದ ಬದಿಯಿಂದ
ಮುಂಜಾನೆಯ ರವಿ ಇಣುಕಿದಂತೆ
ಕಿಟಕಿ ಹಿಂದಿನ ಕಂಗಳು,
ಕಂಡೂ ಕಾಣದ ಮುಂಗುರುಳು
ಗಲಗಲ ಬಳೆಯ ತರಂಗ
ಕಿಲಕಿಲ ನಗುವಿನಂತರಂಗ,

ಎದುರು ಬರಲಾರರು ಚೆಲುವೆಯರು
ಬಂದರೂ ಬಹು ಲಾಸ್ಯ ಲಜ್ಜೆ
ಇಡುತಲಿ ಒಂದೊಂದೇ ಹೆಜ್ಜೆ
ಮುಗಿಲಿಂದ ಬರಗಾಲದಿ ಮಳೆ ಹನಿ
ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ !

ಕಿರು ಹನತೆ ಉರಿಯಂತೆ ತುಟಿ ರಂಗು
ಪತಂಗ ಹಾರಿದಂತೆ ತೆಳು ಸೆರಗು
ಕಾವ್ಯದೊಡತಿಯರು,
ಮೌನವೇ ಮಾತು

ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ
ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ
ಒಮ್ಮೆ ಧಾರಾಳ ದಮಯಂತಿ
ಮಗದೊಮ್ಮೆ ಮುನಿದ ಮಗುವಂತೆ
ಅಲ್ಲಿ ಪ್ರೇಮ ಪ್ರೀತಿಯನ್ನರಸುವ
ಹುಡುಗನ ನಿರಂತರ ಬೇಟೆ !
ಅರಿವಾಗುವ ಮುನ್ನವೇ ಮಾನಸಿಕ
ಪತ್ನಿಯಾಗಿರುತ್ತಾಳೆ,
ಛೇಧಿಸಿ ಹೃದಯ ಕೋಟೆ.

- ಶ್ರೀಗೋ.

27 Sep 2014, 05:09 pm

ನನ್ನಪ್ಪ

ನಮ್ಮಪ್ಪ ಉಳುಮೆಗಾರ
ಕಂಡೋರ ಹೊಲದಲ್ಲಿ ದುಡಿಯೋ
ದುಡಿಮೆಗಾರ.
ತನ್ದು ಅಂತ ನಾಕು ಗದ್ದೆ ಮಾಡಿ
ತಾನೂ ಒಬ್ಬ ರೈತ ತೋರ್ಸಿದ
ಛಲಗಾರ.
ಕಾಡಲ್ಲಿ ಮನೆ ಕಟ್ಟಿ
ಕಂಡೋರ ಮನೆಯ ಕೂಲಿ ಮಾಡಿ
ಕೈಲಾದ ನಾಕು ಕಾಸು ದುಡಿದು
ನಮ್ಮನ್ನ ಸಾಕಿ ಸಲುಹಿದಾತ
ಸಂಜೆ ಕುಡಿತ
ಅದಕಿಲ್ಲ ಹಿಡಿತ
ಆದ್ರೂ ಅವಂದು ಭಾರಿ ದುಡಿತ
ಏನೇ ಕಷ್ಟ ಬಂದ್ರೂ ಸಹ
ಎದೆಗುಂದದೆ
ಕಂಬನಿ ಒದ್ದು,
ಕಂಬಳಿ ಹೊದ್ದು
ಮಳೆ ಗುಡುಗೆನ್ನದೆ
ಚಳಿ ನಡುಗೆನ್ನದೆ
ದುಡಿ ದುಡಿದು
ಬೇರೆಯವ್ರ ಕಣಜವ ತುಂಬಿದಾತ.
ಆಳು ಹಾಕಿ ಗುತ್ತಿಗೆ ಹಿಡಿದು
ತಾನೂ ದನಿಕನಾಗುವ
ಕನಸು ಕಂಡಾತ.
ವರ್ಷಗಟ್ಲೆ ಗುತ್ತಿಗೆ ಮಾಡಿ
ಲಾಭ ಬರದೆ ಆಕಾಶ ನೋಡಿ
ಕಣ್ ಕಣ್ ಬಿಟ್ಟಾತ.
ಅಪ್ಪಾ...
ನೀನ್ಯಾಕೆ ಬಡವನಾಗಿ ಹುಟ್ಟಿದೆ?

- ಶ್ರೀಗೋ.

25 Sep 2014, 01:26 am

ಸಹೋದರ

ಬಿಸಿಲಿನ ಕೆಳಗೆ
ನಿಂತು
ನಗು ಮುಖ
ಬೀರುವ
ಸಹೋದರನನ್ನು
ಕಾಣುವಾಗ

ಬೆಳಗಿನಾಕಾಶದಲಿ
ಸೂರ್ಯ
ಮೂಡುವಾಗ
ಮರೆಯಾದ
ಚಂದ್ರನಂತೆ
ಅಡಕವಾದ

ತಾಳ್ಮೆ
ತ್ಯಾಗ
ಭರವಸೆ
ನೆನಪಾಯಿತು.

- ಮುಸ್ತಫಾ ಇರುವೈಲು

21 Sep 2014, 04:40 pm